Thursday, January 13, 2011

‘ಶ್ರೀ ಶೈಲ ಶ್ರೀಪರ್ವತ’ ಪಯಣ


ಕರ್ನಾಟಕ ಸಂಸ್ಕೃತಿಯ ಚರ್ಚೆಯಲ್ಲಿ ಮತ್ತೆಮತ್ತೆ ಬರುವ ಕೆಲವು ಪ್ರಾಚೀನ ಕ್ಷೇತ್ರಗಳಲ್ಲಿ ಕಲ್ಯಾಣ, ಹಂಪಿ, ಶ್ರೀಶೈಲ, ತಿರುಪತಿ, ಕಾಶಿ, ಕೊಲ್ಲಾಪುರಗಳು ಮುಖ್ಯವಾಗಿವೆ. ಇವುಗಳಲ್ಲಿ ಶ್ರೀಪರ್ವತವೆಂದು ಹೆಸರಾಗಿರುವ ಶ್ರೀಶೈಲಕ್ಕೆ ಹೋಗಬೇಕೆಂದು ನನಗೆ ಬಹಳ ದಿನಗಳಿಂದಲೂ ಆಸೆಯಿತ್ತು. ಅದರಲ್ಲೂ ಅಲ್ಲಿನ ಕದಳಿಯ ಗುಹೆಗೆ ಹೋಗಬೇಕಿತ್ತು. ಯಾಕೆಂದರೆ-
೧. ೧೨ನೇ ಶತಮಾನದ ವಚನಕಾರರಾದ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ತಮ್ಮ ಬದುಕಿನ ಕೊನೆಯ ಪಯಣವಾಗಿ ಶ್ರೀಶೈಲದ ಕದಳಿಯ ಗುಹೆಗೆ ಹೋದರು. ಮಹಾರಾಷ್ಟ್ರದ ಅನೇಕ ಯೋಗಿಗಳು ದೇಹತ್ಯಾಗಕ್ಕೆ ಕದಳಿಗೆ ಹೋದರು. ಇದನ್ನು ನೋಡುವಾಗ ಕದಳಿಗೂ ದೇಹತ್ಯಾಗಕ್ಕೂ ಬಯಲು ತತ್ವಕ್ಕೂ ಯಾವುದೊ ಸಂಬಂಧವಿದ್ದು ಅದನ್ನಷ್ಟು ಅರಿಯಬೇಕಿತ್ತು.  
೨. ಕರ್ನಾಟಕದ ತುಂಬ ನೂರಾರು ಶ್ರೀಶೈಲದ ಮಲ್ಲಯ್ಯನ ಗುಡಿಗಳಿವೆ. ಮಲೆಯಲ್ಲಿರುವ ಈ ಅಯ್ಯನನ್ನು ನೋಡಲು ಅನೇಕ ಶತಮಾನಗಳಿಂದ ಕರ್ನಾಟಕದ ಜನ ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಿದ್ದಾರೆ. ೧೨ನೇ ಶತಮಾನದ ವಚನಕಾರ ಸಿದ್ಧರಾಮ ಶ್ರೀಶೈಲಕ್ಕೆ ಚಾರಣ ಮಾಡಿದ್ದನು. ಈಗಲೂ ಸೊಲ್ಲಾಪುರದ ಸಿದ್ಧರಾಮನ ಗುಡಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವ ಪದ್ಧತಿಯಿದೆ. ಕಾವೇರಿ ತೀರದ ಮುಡುಕುತೊರೆಯ ಮಲ್ಲಯ್ಯನ ಒಕ್ಕಲಾದ ಕಂಬಿಯವರು ಕೂಡ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವುದುಂಟು. ಗುಡಿಸಂಸ್ಕೃತಿಯನ್ನು ನಿರಾಕರಿಸಿದ ಶರಣರ ಕರ್ನಾಟಕದಿಂದ ಇಷ್ಟೊಂದು ಜನ ಸ್ಥಾವರ ಲಿಂಗವಿರುವ ಶ್ರೀಶೈಲಕ್ಕೆ ಮುಗಿಬಿದ್ದು ಹೋಗುತ್ತಿರುವುದ ಏಕೆಂದು  ತಿಳಿಯಬೇಕಿತ್ತು.
೩. ಶ್ರೀಶೈಲವು ಒಂದು ಕಾಲಕ್ಕೆ ಯೋಗಸಾಧಕರನ್ನು ಕೈಬೀಸಿ ಕರೆಯುವ ತಾಣ. ಶಾಕ್ತ, ನಾಥ, ಭೈರವ, ಬೌದ್ಧ ತಾಂತ್ರಿಕಪಂಥಗಳಿಗೆ ಅದು ನೆಲೆಮನೆ. ಅದರ ದುರ್ಗಮತೆಯು ರಹಸ್ಯ ತಾಂತ್ರಿಕ ಪಂಥಗಳಿಗೆ ಈಗಲೂ ಹೇಳಿಮಾಡಿಸಿದಂತಿದೆ. ಬೌದ್ಧದಾರ್ಶನಿಕ ನಾಗಾರ್ಜುನ ಶ್ರೀಶೈಲದಲ್ಲಿದ್ದನು. ಅಲ್ಲಮ ಗೋರಖನಾಥನನ್ನು ಅಲ್ಲಿ ಮುಖಾಮುಖಿ ಮಾಡಿದ ಕತೆಯಿದೆ. ಶಂಕರಾಚಾರ್ಯರು ಅಲ್ಲಿಯೇ ಭೈರವಾರಾಧಕರನ್ನು ಮುಖಾಮುಖಿ ಮಾಡಿದ ಬಗ್ಗೆಯೂ ಮಿತ್‌ಗಳಿವೆ. ಮಚೇಂದ್ರನಾಥನು ಇಲ್ಲಿನ ನಾರಿಯರ ಜತೆ ಕೌಳಸಾಧನೆ ಮಾಡಿದನೆಂದು ಹೇಳಲಾಗುತ್ತಿದೆ. ಭಾರತದ ಯಾವತ್ತೂ ಯೋಗಿಗಳೂ ಚಿಂತಕರು ಸಾಧಕರು ಜೀವನದಲ್ಲಿ ಒಮ್ಮೆಯಾದರೂ ಹೋಗಿ ತಮ್ಮ ಎದುರಾಳಿಗಳ ಮುಖಾಮುಖಿ ಮಾಡಿ ವಾದಕೊಡುವಂತಹ ಒಂದು ಜಾಗವಾಗಿತ್ತು ಶ್ರೀಶೈಲ.
ಇಂತಹ ಕೆಲವು ಸಂಶೋಧನೆಯ ಪ್ರಶ್ನೆಗಳು ಕಾಡುತ್ತಿದ್ದವು. ನಿಜ ಹೇಳಬೇಕೆಂದರೆ, ಶ್ರೀಶೈಲವು ಸೆಳೆಯುತ್ತಿದ್ದುದು ನನ್ನ ಕಾಲೊಳಗೆ ಇರುವ ಚಕ್ರದ ಕೆರೆತದಿಂದಾಗಿ.
ಸರಿ, ಹೊಸಪೇಟೆಯಿಂದ ಬಳ್ಳಾರಿ ಆದೋನಿ ಕರ್ನೂಲು ಮಾರ್ಗವಾಗಿ  ಶ್ರೀಶೈಲಕ್ಕೆ ಬಸ್ಸಿನಲ್ಲಿ ಹೊರಟೆ. ಶ್ರೀಶೈಲ ಎಂತಹ ಕಠಿಣ ಜಾಗದಲ್ಲಿದೆಯೆಂದರೆ, ಅಲ್ಲಿಗೆ ರೈಲ್ವೆ ಹಳಿ ಹಾಕುವುದೇ ಕಷ್ಟ. ಬಸ್ಸಿನಲ್ಲಿ ಹೋಗುವಾಗಲೇ ಇಷ್ಟು ದಣಿವು. ಇನ್ನು ಯಾತ್ರಿಕರು ಹೇಗೆ ತಾನೇ ಪಾದಯಾತ್ರೆ ಮಾಡುತ್ತಿದ್ದರೊ? ಬಹುಶಃ ಪಾದಯಾತ್ರಿಗಳ ಕಾಲ್ದಾರಿ ಸರಾಗವಿರಬೇಕು. ದಾರಿಯುದ್ದಕ್ಕೂ ಕನ್ನಡದ ಹೆಸರಿನ ಊರುಗಳು; ಪಾದಯಾತ್ರಿಗಳು ತಂಗಲು ಛತ್ರಗಳು; ಅರವಟ್ಟಿಗೆಗಳು; ಕರ್ನಾಟಕದಲ್ಲಿ ಇಂತಹ ಪಾದಯಾತ್ರೆಗಳು ಮಲೆಯ ಮಾದೇಶ್ವರ ಬೆಟ್ಟಕ್ಕೂ ತಿರುಪತಿಗೂ ನಡೆಯುತ್ತಿದ್ದವು. ಈಗವು ಬಹುತೇಕ ನಿಂತಿವೆ.

 
ಮಲೆನಾಡಿನವನಾದ ನಾನು ಶ್ರೀಶೈಲದ ಕಾಡನ್ನು ಮೊದಲಿಗೆ ಕಂಡು ಚಕಿತನಾದೆ. ಆದರೂ ನಡುಭಾರತದಲ್ಲಿ ಎದುರಾಗುವ ವಿಂಧ್ಯಪರ್ವತದ ಕಾಡನ್ನಾಗಲಿ, ಉತ್ತರದ ಹಿಮಾಲಯದ ಅಡವಿಯನ್ನಾಗಲಿ ಕಂಡವರಿಗೆ ನಮ್ಮ ಆಗುಂಬೆ ಕುದುರೆಮುಖಗಳ ಕಾಡು ಎಷ್ಟು ದಟ್ಟ ಮತ್ತು ವಿಶಿಷ್ಟ ಎಂದು ಹೊಳೆಯುತ್ತದೆ. ಶ್ರೀಶೈಲದ ಕಾಡು ಗಿಡ್ಡಮರಗಳದ್ದು. ದಟ್ಟವಲ್ಲ. ಬಹುಶಃ ಕಲ್ಲುನೆಲ ಹಾಗೂ ಕಡಿಮೆ ಮಳೆಯ ಕಾರಣ, ಮರಗಳು ಎತ್ತರ ಬೆಳೆದಂತಿಲ್ಲ. ಇದು ಬಿಳಿಗಿರಿರಂಗನ ಬೆಟ್ಟದ ಕಾಡನ್ನು ಹೋಲುತ್ತದೆ ಎನ್ನಬಹುದು. ಬಸ್ಸು ಕಾಡಲ್ಲಿ ಸುತ್ತಿಸುತ್ತಿ ಒಂದು ದೊಡ್ಡಬೆಟ್ಟದ ತುದಿಗೆ ಹತ್ತಿತು. ಅಲ್ಲಿಂದ ದೂರದ ತಗ್ಗಿನಲ್ಲಿ, ಬಿಸಿಲಿಗೆ ಹಾಲಹಳ್ಳದಂತೆ ಬೆಳ್ಳಗೆ ಬೆಳಗುವ ಕೃಷ್ಣಾನದಿಯ ದಡದಲ್ಲಿ, ಶ್ರೀಶೈಲವು ತಟ್ಟನೆ ದೃಗ್ಗೋಚರವಾಯಿತು. ತಿರುಪತಿ, ಮಾದೇಶ್ವರ ಬೆಟ್ಟಗಳಂತೆ ಇದೂ ಕೂಡ ಸುತ್ತ ಕಾವಲು ನಿಂತ ಬೆಟ್ಟಗಳ ನಡುವೆ, ಕಣಿವೆಯಲ್ಲಿರುವ ಕ್ಷೇತ್ರ.
ಆದರೆ ಪ್ರಾಚೀನತೆಯ ಕುರುಹುಗಳನ್ನು ಕಲ್ಪಿಸಿಕೊಂಡಿದ್ದ ನನಗೆ ಸಣ್ಣಪಟ್ಟಣದಂತಿದ್ದ ಆಧುನಿಕ ಶ್ರೀಶೈಲದ ಪಕ್ಷಿನೋಟ ನಿರಾಸೆ ತಂದಿತು. ಗತಕಾಲದ ಚರಿತ್ರೆಯ ಹುಡುಕಾಟ ಮಾಡುವವರೊಳಗೆ ಪ್ರಾಚೀನತೆಯ ವಾಸನೆಯ ವಿಚಿತ್ರ ಗೀಳಿರುತ್ತದೆ. ಆಧುನಿಕತೆಯ ಬಗ್ಗೆ ವಿಚಿತ್ರ ಅಸಹನೆ ಇರುತ್ತದೆ. ವ್ಯಂಗ್ಯವೆಂದರೆ, ಆಧುನಿಕತೆಯು ನಮ್ಮ ನಿತ್ಯ ಬದುಕಿನ ತುಂಬ ತುಂಬಿಕೊಂಡಿದ್ದರೂ, ಅದರ ಸ್ಪರ್ಶವಿಲ್ಲದೆ ಕೆಲವು ಲೋಕಗಳು ಉಳಿದಿರಬೇಕು ಎಂದು ಬಯಸುತ್ತೇವೆ. ಈ ಮನೋಧರ್ಮ ಎಲ್ಲಿಂದ ಬಂತೊ ಏನೊ?

 ಬಸ್ಸು ಕಾಡಲ್ಲಿ ಸುತ್ತಿಸುತ್ತಿ ಒಂದು ದೊಡ್ಡಬೆಟ್ಟದ ತುದಿಗೆ ಹತ್ತಿತು. ಅಲ್ಲಿಂದ ದೂರದ ತಗ್ಗಿನಲ್ಲಿ, ಬಿಸಿಲಿಗೆ ಹಾಲಹಳ್ಳದಂತೆ ಬೆಳ್ಳಗೆ ಬೆಳಗುವ ಕೃಷ್ಣಾನದಿಯ ದಡದಲ್ಲಿ, ಶ್ರೀಶೈಲವು ತಟ್ಟನೆ ದೃಗ್ಗೋಚರವಾಯಿತು. ತಿರುಪತಿ, ಮಾದೇಶ್ವರ ಬೆಟ್ಟಗಳಂತೆ ಇದೂ ಕೂಡ ಸುತ್ತ ಕಾವಲು ನಿಂತ ಬೆಟ್ಟಗಳ ನಡುವೆ, ಕಣಿವೆಯಲ್ಲಿರುವ ಕ್ಷೇತ್ರ.

ಹೋದವನೇ ಒಂದು ಛತ್ರದಲ್ಲಿ ವಸತಿಮಾಡಿದೆ. ಶ್ರೀಶೈಲದಲ್ಲಿ ಆಯಾ ಜಾತಿಸಮುದಾಯಕ್ಕೆ ಒಂದರಂತೆ ಛತ್ರಗಳಿವೆ. ಕರ್ನಾಟಕದ ಅನೇಕ ಮಠಗಳ ಛತ್ರಗಳೂ ಇವೆ. ಇಡೀ ಶ್ರೀಶೈಲದಲ್ಲಿ ಬೇಕಾದಷ್ಟು ತೆಲುಗು ಮರಾಠಿಗರ ಪ್ರವೇಶವಿದೆಯಾದರೂ, ಕನ್ನಡಿಗರ ಹಿಡಿತವಿನ್ನೂ ಇದೆ. ಗುಡಿಯ ಅರ್ಚಕರು ಕನ್ನಡದವರು. ಗುಡಿಯ ಆವರಣದಲ್ಲಿರುವ ಪಂಚಾಚಾರ್ಯರ ಒಂದು ಮಠ ಕನ್ನಡದ್ದು. ಭಕ್ತರೂ ಹೆಚ್ಚಾಗಿ ಕನ್ನಡಿಗರು. ಆದರೆ ಶಿವಾಜಿಯು ಶಕ್ತಿದೇವತೆಯ ಭಕ್ತನಾಗಿ ಇಲ್ಲಿ ಶಕ್ತಿಪೀಠಕ್ಕೆ ನಡೆದುಕೊಂಡವನಾದ ಕಾರಣ, ಮರಾಠಿಗರೂ ಹಿಡಿತ ಸಾಧಿಸಿದರು. ಕನ್ನಡ ಮರಾಠಿ ತೆಲುಗರ ನಡುವೆ ಇಲ್ಲಿ ವಿಚಿತ್ರ ಮೇಲಾಟವಿದೆ ಅನಿಸಿತು.
ಮೊದಲನೇ ದಿನವೇ ನಾನು ಮಲ್ಲಿಕಾರ್ಜುನ ಗುಡಿಯನ್ನು ನೋಡಲು ಆರಂಭಿಸಿದೆ. ಭಾರತದ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಲ್ಲಿಕಾರ್ಜುನನದು ದೊಡ್ಡಗುಡಿ. ಪ್ರಾಕಾರದ ಸುತ್ತೇ ಒಂದು ಮೈಲಿಯಷ್ಟು. ಈ ಗುಡಿವ್ಯವಸ್ಥೆಯನ್ನು ನೋಡಿದರೆ, ಇದಕ್ಕೆ ದೊಡ್ಡದೊಡ್ಡ ರಾಜ್ಯಗಳ ಬೆಂಬಲ ಖಂಡಿತ ಇದ್ದಿರಬೇಕು. ನನಗೆ ಸೆಳೆದಿದ್ದು ಗುಡಿಯ ಗೋಡೆಗೆ ಲಗತ್ತಿಸಿದ ಶಿಲಾಫಲಕಗಳ ಮೇಲೆ ಕೆತ್ತಲಾಗಿರುವ ಉಬ್ಬುಚಿತ್ರಗಳು. ಹಂಪಿಯ ಮಂಟಪ ಗುಡಿಗಳ ಕಂಬಗಳಲ್ಲೂ ಉಬ್ಬುಶಿಲ್ಪಗಳಿವೆ. ಆದರೆ ಶ್ರೀಶೈಲದ ಉಬ್ಬುಚಿತ್ರಗಳು ಆದಿಮ ಶೈವ ಸಂಪ್ರದಾಯವನ್ನು ಸೂಚಿಸುವಂತಹವು. ಅವನ್ನೆಲ್ಲ ನೋಡುವಾಗ ಗತಕಾಲದ ಸಂಪುಟವೊಂದರ ತೆರೆದಿಟ್ಟ ಹಾಳೆ ಓದುತ್ತಿರುವ ಅನುಭವವಾಗುತ್ತದೆ. ಅದರಲ್ಲಿ ಕುದುರೆ ಆನೆ ಸಾಲುಗಳಿವೆ; ಮಾರ್ಕಂಡೇಯ ಬೇಡರಕಣ್ಣಪ್ಪ ಇತ್ಯಾದಿ ಶಿವಪುರಾಣದ ಪ್ರಸಂಗಗಳಿವೆ; ಶೂಲಕಂಬಕ್ಕೇರಿಯೊ, ತಲೆಕತ್ತರಿಸಿಕೊಂಡೊ ಪ್ರಾಣತ್ಯಾಗ ಮಾಡಿದ ವೀರರಿದ್ದಾರೆ; ಕಾಡುಮಿಗಗಳನ್ನು ಬೇಟೆಯಾಡುತ್ತಿರುವ ಜನರು; ಸಸ್ಯಾಹಾರಿ ಪ್ರಾಣಿಗಳ ಮೇಲೆ ಹುಲಿ ಮಾಡುತ್ತಿರುವ ಆಕ್ರಮಣ; ವಿವಿಧ ಯುದ್ಧಭಂಗಿಗಳಲ್ಲಿ ಕಾದುತ್ತಿರುವ ಸೈನಿಕರು; ಹಾವಾಡಿಸುವ ಹಾವಾಡಿಗ; ಮೈ ಎಲುಬು ಕಾಣುವಂತೆ ಬಡಕಲಾದ ದೇಹವುಳ್ಳ ಭಿಕ್ಷುಕಿ(ಯೋಗಿನಿ?); ಒಡೆಯನ ಕಾಲಿಂದ ಮುಳ್ಳು ತೆಗೆಯುವ ಸೇವಕರು; ಆನೆ ಮರಕೀಳುವಾಗ ಕೋತಿ ಮಾಡುತ್ತಿರುವ ಕಿರುಚಾಟ; ನೃತ್ಯ ಮತ್ತು ವಾದ್ಯಕಾರರ ಮೇಳಗಳು-ಒಟ್ಟಿನಲ್ಲಿ ಆ ಗೋಡೆಯು ಶ್ರೀಶೈಲದ ವಿಶ್ವಕೋಶವೆನ್ನಬಹುದು.

ಹೆಚ್ಚಿನ ಶಿಲ್ಪಗಳಲ್ಲಿ ಒಂದು ಜೀವವನ್ನು ಇನ್ನೊಂದು ತೆಗೆಯುತ್ತಿರುವ ಸಂಘರ್ಷವಿದೆ. ಇಲ್ಲಿ ಈಗಲೇ ಇಷ್ಟೊಂದು ದಟ್ಟಕಾಡಿದೆ. ಹಿಂದೆ ಇನ್ನೆಷ್ಟು  ದಟ್ಟವಾಗಿತ್ತೊ? ಜನ ಬದುಕುಳಿಯಲು ಕಾಡುಪ್ರಾಣಿಗಳ ಜತೆ ಅನಿವಾರ್ಯವಾಗಿ ಸೆಣಸಾಟ ಮಾಡಬೇಕಿತ್ತು. ಆದ್ದರಿಂದ ಬೇಟೆಯ ಚಿತ್ರಗಳು ಸಹಜವಾಗಿಯೇ ಇವೆ. ಈ ಬೇಟೆಯು ಯುದ್ಧದ ಅಣುಕು ಆಚರಣೆ ಕೂಡ. ಯುದ್ಧಗಳಲ್ಲೂ ಎದುರಾಳಿಯನ್ನು ಕೊಲ್ಲುವುದೇ ಶೌರ್ಯ ತಾನೇ? ನಮ್ಮ ದೊಡ್ಡ ಮಸೀದಿ ಮತ್ತು ಗುಡಿಗಳು ಕೇವಲ ಭಕ್ತಿ ಸಮರ್ಪಣೆಯ ಜಾಗಗಳಲ್ಲ. ಅವಕ್ಕೆ ಯುದ್ಧದ ಜತೆಗೆ ವಿಚಿತ್ರ ಸಂಬಂಧವಿದೆ. ಅನೇಕ ಸಲ ದೊರೆಗಳು ತಾವು ಗೆದ್ದು ತಂದ ಸೂರೆಯಿಂದ ಅವನ್ನು ಕಟ್ಟಿಸುತ್ತಿದ್ದರು. ಕೃಷ್ಣದೇವರಾಯನು ಒರಿಸ್ಸಾದ ಗಜಪತಿಯ ರಾಜ್ಯದ ಸೂರೆಯಿಂದ ಹಂಪಿಯಲ್ಲಿ ಕೃಷ್ಣನ ಗುಡಿಯನ್ನು ಕಟ್ಟಿಸಿದನು. ಸುಲ್ತಾನರು ಕೂಡ ಯುದ್ಧಸೂರೆಯಿಂದ ಶಾಹೀ ಮಸೀದಿ ಕಟ್ಟಿಸುತ್ತಿದ್ದರು. ಆದ್ದರಿಂದಲೇ ಸೂಫಿಗಳು ಅವನ್ನು ನಿರಾಕರಿಸುತ್ತಿದ್ದರು. ಉಳ್ಳವರು ಶಿವಾಲಯ ಮಾಡುವರು ಎಂದು ಬಸವಣ್ಣ ಹೇಳುವಾಗ ಈ ಅರ್ಥವೂ ಇತ್ತು. ಹೀಗಾಗಿ ನಮ್ಮ ಧರ್ಮಗಳಿಗೂ ಯುದ್ಧಸಂಸ್ಕೃತಿಗೂ ಬಿಡಲಾರದ ನಂಟು. ಈಗ ನಡೆಯುತ್ತಿರುವ ಧರ್ಮಯುದ್ಧಗಳಲ್ಲೂ ಇದೇ ಪ್ರವೃತ್ತಿ ಬೇರೊಂದು ರೂಪದಲ್ಲಿ  ಮುಂದುವರೆದಿದೆಯಷ್ಟೆ.
ನನಗೆ ಸೋಜಿಗವಾಗಿದ್ದು ಶ್ರೀಶೈಲದಲ್ಲಿ ಕಂಡ ಅಸಂಖ್ಯಾತ ನರಬಲಿ ಮತ್ತು ಪ್ರಾಣಿಬಲಿ ಶಿಲ್ಪಗಳನ್ನು ನೋಡಿ. ಇವು ಇಲ್ಲಿ ಒಂದು ಕಾಲಕ್ಕಿದ್ದ ಶೈವಧರ್ಮದ ಸಂಕೇತಗಳು. ಕುರಿಯನ್ನು ಲಿಂಗದ ಮುಂದೆ ಕಡಿಯುತ್ತಿರುವ ಶಿಲ್ಪ; ತಮ್ಮ ತಲೆಯನ್ನು ಲಿಂಗದ ಮುಂದೆ ಕತ್ತರಿಸಿಕೊಂಡಿರುವ ವೀರನ ಶಿಲ್ಪ; ಶೂಲಕಂಭಕ್ಕೇರಿದ ವೀರರ ಶಿಲ್ಪ; ಇಷ್ಟದೈವವನ್ನು ಒಲಿಸುವ ಎಷ್ಟು ಬಗೆಯಲ್ಲಿ ಮನುಷ್ಯ ಜೀವವು ಸಮರ್ಪಣೆಯಾಗಿದೆ. ಬಲಿಯಾದವರೆಲ್ಲ ಪುರುಷರು ಅಥವಾ ಗಂಡುಪ್ರಾಣಿಗಳು. ಶೂಲಕ್ಕೇರಿಸಿದರು ಎಂದು ಬಾಲ್ಯದಲ್ಲಿ ಚಂದಮಾಮಾ ಕತೆಗಳಲ್ಲಿ ಓದಿದ್ದೆ. ಆದರೆ ನನಗೆ ಶೂಲಕ್ಕೆ ಹೇಗೆ ಏರಿಸುತ್ತಾರೆ ಎಂಬುದರ ಸ್ಪಷ್ಟಚಿತ್ರ ಸಿಕ್ಕಿದ್ದು ಶ್ರೀಶೈಲದಲ್ಲೇ. ಗುದದ್ವಾರದಲ್ಲಿ ಹೊಕ್ಕ ಶೂಲವು ವೀರರ ಬಾಯಲ್ಲಿ ಬೆನ್ನಲ್ಲಿ ಎದೆಯಲ್ಲಿ ಹೊಕ್ಕು ಮೇಲೆಬಂದಿದೆ. ಒಂದೆಡೆ ಕತ್ತರಿಸಿದ ತಮ್ಮವರ ಕೈಕಾಲುಗಳನ್ನು ನೋಡುತ್ತ ವೀರನ ಕಡೆಯವರು ರೋದಿಸುವ ಶಿಲ್ಪವೂ ಇದೆ.

ನಿಸ್ಸಂಶಯವಾಗಿ ಶ್ರೀಶೈಲವು ಶರಣಪೂರ್ವ ಕಾಲದಲ್ಲಿ ಮತ್ತು ನಂತರದಲ್ಲೂ ಕೂಡ ಅತಿಮಾರ್ಗಿ ಶೈವಧರ್ಮದ ಪಂಥಗಳಿದ್ದ ಜಾಗವಾಗಿತ್ತು. ಕಲ್ಯಾಣದ ಶರಣರು ಈ ಶೈವಪಂಥಗಳನ್ನು ಕಟುವಾಗಿ ಟೀಕೆಮಾಡಿದರು. ಎಂತಲೇ ಅವರಿಗೆ ಶ್ರೀಶೈಲವು ಮುಖ್ಯವಾಗಲಿಲ್ಲ. ಆದರೂ ಅಕ್ಕ ಮತ್ತು ಅಲ್ಲಮರು ಶ್ರೀಶೈಲಕ್ಕೆ ಹೋದರು.

ಶ್ರೀಶೈಲವು ಭೈರವ, ಕಾಪಾಲಿಕ, ಶಾಕ್ತ, ಕೌಳ ಮುಂತಾದ ಶೈವಪಂಥಗಳು ಇದ್ದ ಜಾಗ. ಈ ಪಂಥಗಳಲ್ಲಿ ಪಂಚಮಕಾರಗಳು (ಮದ್ಯ, ಮಾಂಸ, ಮತ್ಸ್ಯ, ಮೈಥುನ, ಮುದ್ರಾ) ಸಾಮಾನ್ಯವಾಗಿದ್ದವು. ಇದರ ಭಾಗವಾಗಿ ನರಬಲಿಯೂ ಇತ್ತು. ಕರ್ನಾಟಕದಲ್ಲಿ ನರಬಲಿಯನ್ನು ಸೂಚಿಸುವ ನೂರಾರು ಬಲಿಶಿಲ್ಪಗಳಿವೆ. ಶ್ರೀಶೈಲದ ತುಂಬ ತುಂಬಿಕೊಂಡಿರುವ ಮೂರ್ತಿಗಳೆಂದರೆ ಭೈರವನದು. ರುಂಡಮಾಲೆ ಧರಿಸಿ, ಕತ್ತರಿಸಿದ ನರರುಂಡವನ್ನು ಕೈಯಲ್ಲಿ ಹಿಡಿದ ಭೈರವನು ಇಲ್ಲಿದ್ದ ಕಾಪಾಲಿಕರ ಆಧಿದೈವ. ಮಲ್ಲಿಕಾರ್ಜುನ ಗುಡಿಯ ಮುಂದೆ ಸಹ ದೊಡ್ಡ ಬಲಿಪೀಠವಿದೆ. ವೃದ್ಧ ಮಲ್ಲಿಕಾರ್ಜುನ ಎಂದು ಕರೆಯಲಾಗುವ ಲಿಂಗದ ನೆತ್ತಿಯ ಮೇಲಣ ಕಚ್ಚುಗಳನ್ನು ನೋಡಿದರೆ, ಶಿವಲಿಂಗದ ಮೇಲೆಯೇ ಬಲಿಕೊಡುತ್ತಿದ್ದರೊ ಏನೊ ಅನಿಸುತ್ತದೆ.
 
ಮಲ್ಲಿಕಾರ್ಜುನ ಗುಡಿಯ ಹಿಂದೆ, ಅವನ ಮಡದಿ ಭ್ರಮರಾಂಬೆಯ ಗುಡಿಯಿದೆ. ಅದಕ್ಕೆ ಲಗತ್ತಾಗಿ ರುಧಿರಕುಂಡವಿದೆ. ಬಹುಶಃ ಬಲಿಯ ರಕ್ತವು ಆ ಕುಂಡದಲ್ಲಿ ಹೋಗಿ ಮಡುಗಟ್ಟಿ ನಿಲ್ಲುತ್ತಿತ್ತು ಎಂದು ಕಾಣುತ್ತದೆ. ಈಗ ಪ್ರಾಣಿಬಲಿ ನಿಂತಿದ್ದು, ರುಧಿರಕುಂಡ ಮುಚ್ಚಲಾಗಿದೆ. ಆದರೂ ದೂರದಲ್ಲಿ ಕದ್ದುಮುಚ್ಚಿ ಬಲಿಪದ್ಧತಿ ನಡೆದಿರಬೇಕು. ಯಾಕೆಂದರೆ, ಶ್ರೀಶೈಲದ ತುಂಬ ಪ್ರಾಣಿಬಲಿಯನ್ನು ಕೊಡಬಾರದು ಎಂದು ನಿರ್ಬಂಧ ಮಾಡಿರುವ ಪೋಸ್ಟರುಗಳನ್ನು ಅಂಟಿಸಲಾಗಿತ್ತು.
ನಿಸ್ಸಂಶಯವಾಗಿ ಶ್ರೀಶೈಲವು ಶರಣಪೂರ್ವ ಕಾಲದಲ್ಲಿ ಮತ್ತು ನಂತರದಲ್ಲೂ ಕೂಡ ಅತಿಮಾರ್ಗಿ ಶೈವಧರ್ಮದ ಪಂಥಗಳಿದ್ದ ಜಾಗವಾಗಿತ್ತು. ಕಲ್ಯಾಣದ ಶರಣರು ಈ ಶೈವಪಂಥಗಳನ್ನು ಕಟುವಾಗಿ ಟೀಕೆಮಾಡಿದರು. ಎಂತಲೇ ಅವರಿಗೆ ಶ್ರೀಶೈಲವು ಮುಖ್ಯವಾಗಲಿಲ್ಲ. ಆದರೂ ಅಕ್ಕ ಮತ್ತು ಅಲ್ಲಮರು ಶ್ರೀಶೈಲಕ್ಕೆ ಹೋದರು.


ಈ ರಾಗ ವಿರಾಗಗಳ ಆತ್ಯಂತಿಕ ಬಿಂದುವಿನಂತಿರುವ ಕದಳಿ ಗುಹೆಯನ್ನು ನೋಡಲು ನಾನು ಎರಡನೇ ದಿನ ನಿರ್ಧರಿಸಿದ್ದೆ. ಚೆನ್ನಮಲ್ಲಿಕಾರ್ಜುನನ ಮೇಲಣ ಅನುರಾಗದಿಂದ ಭವದ ಗಂಡನ ಜತೆ ವಿರಾಗವನ್ನು ಹೊಂದಿದ ಅಕ್ಕಹೊಕ್ಕ ಗುಹೆಯದು. ಮಾಯೆಯ ಜತೆಗಿನ ಪ್ರೇಮಭಂಗವಾಗಿ ಮಹಾವಿರಕ್ತಿ ಪಡೆದನೆಂದು ಹೇಳಲಾಗುವ ಅಲ್ಲಮ ಹೊಕ್ಕ ಗುಹೆಯದು. ಇದಕ್ಕಾಗಿ ದೋಣಿಯನ್ನು ಗೊತ್ತುಪಡಿಸಬೇಕಿತ್ತು. ಸಂಜೆಯ ಹೊತ್ತಿಗೆ ದೋಣಿಗಳು ಹೊರಡುವ ಪಾತಾಳಗಂಗೆ ಎಂಬ ನದೀತೀರಕ್ಕೆ ಹೋದೆ. ಅಲ್ಲಿಗೆ ಹೋದಾಗ, ಕದಳಿಗೆ ಹೋಗುವುದು ಎಂತಹ ಕಷ್ಟದ ಮತ್ತು ಅಪಾಯಕರ ಯತ್ನ ಎಂದು ಗೊತ್ತಾಯಿತು. ದೋಣಿಕಾರರು ಬರಲು ನಿರಾಕರಿಸಿದರು. ನಾನು ಯಾವ ಕಾರಣಕ್ಕೆ ಅತ್ಯಾಸೆಯಿಂದ ಬಂದೆನೊ, ಅದುವೇ ಕೈತಪ್ಪಿ ಹೋಗುವಂತೆ ತೋರಿ ದು:ಖವಾಯಿತು. ಆದರೂ ನನಗೆ ಕದಳಿಗೆ ಹೋಗಲು ಸಾಧ್ಯವಾಯಿತು. ಅದು ನನ್ನ ಜೀವನದ ಅಪೂರ್ವ ಅನುಭವಗಳಲ್ಲಿ ಒಂದಾಯಿತು.

ಆದರೆ ಅವರು ಹೋಗಿದ್ದು ಗುಡಿಗಲ್ಲ, ಕದಳಿಯ ಗುಹೆಗೆ. ಕಾರಣ, ಶ್ರೀಶೈಲವು ಅತಿಮಾರ್ಗಿ ಪಂಥಗಳಿದ್ದ ತಾಣ ಮಾತ್ರವಾಗಿರಲಿಲ್ಲ. ದರ್ಶನದಲ್ಲೂ ವಿದ್ವತ್ತಿನಲ್ಲೂ ಯೋಗದಲ್ಲೂ ದೊಡ್ಡ ಸಾಧನೆ ಮಾಡಿದ ದಾರ್ಶನಿಕರಿಂದಲೂ  ಯೋಗಿಗಳಿಂದಲೂ ವಿದ್ವಾಂಸರಿಂದಲೂ ಜಿಜ್ಞಾಸುಗಳಿಂದಲೂ ಕೂಡಿದ ಜ್ಞಾನಕೇಂದ್ರವೂ ಆಗಿತ್ತು. ಅನೇಕ ಗುರುಗಳು ತಮ್ಮ ಶಿಷ್ಯರಿಗೆ ದಕ್ಷಿಣಕ್ಕೆ ಹೋಗುವಾಗ, ಶ್ರೀಪರ್ವತದ ಕಡೆ ಹೋದೀರಿ ಜೋಕೆ ಎಂದು ಎಚ್ಚರಿಸುತ್ತಿದ್ದರು. ಆದರೆ ಸಾಧಕರು ಅಲ್ಲಿಗೆ ಮುದ್ದಾಮಾಗಿ ಹೋಗುವವರಿದ್ದರು. ಎಂತಲೇ ಮಹಾಜ್ಞಾನಿಯಾದ ಅಲ್ಲಮಪ್ರಭು ಶ್ರೀಶೈಲಕ್ಕೆ ಬಂದಿದ್ದು ಇಲ್ಲಿನ ಸಾಧಕರ ಜತೆ ಒಡನಾಡಲು. ಗುದ್ದಾಡಲು.
ಶ್ರೀಶೈಲದ ಶಿಲ್ಪಗಳಲ್ಲಿ ಲೌಕಿಕ ಬದುಕಿನ ಉನ್ನತಿಗಾಗಿ ಮಾಡುವ ಬೇಟೆ, ಯುದ್ಧ, ಪ್ರಾಣಿಬಲಿ, ಮಿಥುನಗಳು ಇವೆ. ಹಾಗೆಯೇ, ಲೋಕಬದುಕಿನ ಈ ಸಂಭ್ರಮವನ್ನು ನಿರಾಕರಿಸಿ, ನಿತ್ಯದ ಬಾಳಿಗೆ ಬೆನ್ನುಕೊಟ್ಟು, ಕುಟುಂಬವನ್ನು ಬಿಟ್ಟು ಹೊಸಸತ್ಯವನ್ನು ಕಾಣಬಯಸುವ ವಿರಕ್ತಿಯೂ ಇದೆ. ಇದಕ್ಕೆ ಸಾಕ್ಷಿ ಗುಡಿಯ ಗೋಡೆಗಳಲ್ಲಿ ಬಗೆಬಗೆಯ ಭಂಗಿಯಲ್ಲಿ ಧ್ಯಾನನಿರತರಾಗಿರುವ ಮತ್ತು ಚಾರಣ ಮಾಡುತ್ತಿರುವ ನೂರಾರು ಯೋಗಿಗಳು. ಕೆಲವರು ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡುವವರು; ಕೆಲವರು ಚೇಳಿನ ಸವಾರಿ ಮಾಡುವವರು. ಕೆಲವರು ಮತ್ಸ್ಯಾರೂಢರು. ಕೆಲವರು ಗುಹೆಯಲ್ಲಿ ತಪೋನಿರತರಾಗಿರುವವರು. ಬಾಳೆಯ ಗಿಡವಿರುವ ಗುಹೆಯೊಂದಿದ್ದು, ಬಹುಶಃ ಅದು ಇಲ್ಲಿನ ಕದಳಿಗುಹೆ ಇದ್ದೀತು. ರಕ್ತಿ-ವಿರಕ್ತಿ, ಲೌಕಿಕ-ಅಲೌಕಿಕ ಎರಡೂ ಒಟ್ಟಿಗೇ ಮತ್ತು ಅತಿರೇಕದಲ್ಲೇ ಇವೆ ಶ್ರೀಶೈಲದಲ್ಲಿ.

2 comments:

  1. ಸರ್,
    ದಯಮಾಡಿ ಫಾಂಟ್ ಅಳತೆ ದೊಡ್ಡದು ಮಾಡಿ. ಈ ಚಿಕ್ಕ ಅಕ್ಷರಗಳನ್ನು ಓದಲು ಪ್ರಯತ್ನ ಪಟ್ಟು ಕಷ್ಟವಾಯ್ತು. ನಿಮ್ಮ ಬರಹದ ಅಭಿಮಾನಿ ನಾನು. ನಿಮ್ಮ ಬ್ಲಾಗ್ ಓದಲು ಅನುಕೂಲ ಮಾಡಿಕೊಡಿ.

    ReplyDelete
  2. ತುಂಬಾ ಚೆನ್ನಾಗಿದೆ

    ReplyDelete